Skip to main content

Posts

Showing posts from June, 2018
                * ಬೇಡಿಕೆ * ಹಾಡಾಗಲು ಹಂಬಲಿಸುವ ಪದಗಳಿಗೆ ದನಿ ಬೇಕಿದೆ ಹೊಸ ಪಲ್ಲವಿ ನವ ಭಾವಕೆ ಸಹಯೋಗ ರಾಗ ಬೇಕಿದೆ||ಪ|| ಮನದ ನೋವು ಕಕ್ಕುವ ಕಹಿ ಭಾವದ ಪದಗಳಿವೆ ಕಾಲ್ತುಳಿತಕೆ ಘಾಸಿಗೊಂಡ ರಕ್ತಸಿಕ್ತವಾದ ಪದಗಳಿವೆ ದೌರ್ಜನ್ಯವ ಜಗದಗಲಕು ಸಾರಿ ಸಾರಿ ಹೇಳಬೇಕಿದೆ||೧|| ಪ್ರೀತಿ ಕಾಣದೆ ಸೊರಗಿಹ ಭಾವ ವಿಹೀನ ಪದಗಳಿವೆ ಭೇದ ಭಾವಕೆ ನೊಂದಿಹ ಬೆಂದಿಹೋದ ಪದಗಳಿವೆ ಅವಿವೇಕದ ಭ್ರಾಂತಿಯನ್ನ ಅಳಿಸಹಾಕಲೇಬೇಕಾಗಿದೆ ||೨|| ..... ..... ..... .... ‌..... ತ್ರಿನೇತ್ರಜ್.
             *ನಿವೇದನೆ* ಉಸಿರಾಗು ಬಾ ನನ್ನೆದೆಗೆ ಹಸಿರಾಗು ಬಾ ಬದುಕಿಗೆ ನಿನ್ನ ಕಾಣದ ನನ್ನ ಕಂಗಳು ತೊರೆದಂತೆ ನೀರನು ಮೀನಿಗೆ || ಪ || ನೀ ಬಂದರೆ ಈ ಜೀವಕೆ ಅನುರಾಗ ಶುಭಯೋಗ ನಿನಗಾಗಿ ನನ್ನದೆಲ್ಲವೂ ಮಾಡವೆನು ಎಲ್ಲಾ ತ್ಯಾಗ ಜೊತೆಯಾಗು ಬಾ ಚೆಲುವೆ ಆವರಿಸು ಹೃದಯವನೀಗ||೧|| ಉಸಿರಿರದೆ ಮಿಡಿಯುವುದೇ ಎದೆಯೊಳಗಿನ ತಕಧಿಮವು ಪ್ರೇಮವಿರದೆ ನುಡಿಯುವುದೇ ಹೃದಯದೊಳಗೆ ಸರಿಗಮವು ಜೊತೆ ನೀನು ಹೆಜ್ಜೆಹಾಕದೇ ಸಾಗದೀ ಬಾಳ  ಪಯಣವು||೨||              ** ** ** **      ತ್ರಿನೇತ್ರಜ್ (ಶಿವಕುಮಾರ. ಹಿರೇಮಠ)
     *ಅವಳು ಕೇಳಿದಾಗ* ಹಿಂದೊಮ್ಮೆ ಕಾಲೇಜಲ್ಲಿ ಕ್ಲಾಸಮೇಟು ಕೇಳಿದಳು ಇಷ್ಟ ನನಗಾವುದೆಂದು ಕನ್ನಡ ನಮ್ ಭಾಷೆ ಇಂಗ್ಲಿಷು ಪರಭಾಷೆ ಇಷ್ಟ ನನಗಾವುದೆಂದು ಇದೊಳ್ಳೆ ಪೇಚಾಟವ ತಂದಿಟ್ಟೆ ಮಹರಾಯ್ತಿ ಇಂಥ ಪ್ರಶ್ನೆ ಕೇಳೊದೇಕೆ ಇಂಗ್ಲಿಷ್‌ ಮಾಧ್ಯಮ ಓದೋ ಅಚ್ಚ ಕನ್ನಡಿಗ ನಾನು ವಿಸ್ತರಿಸಿ ಹೇಳಬೇಕೆ ಕನ್ನಡ ಇಷ್ಟವೋ ಇಂಗ್ಲಿಷು ಇಷ್ಟವೋ ಇಂಥ ಪ್ರಶ್ನೆ ಕೇಳೊದೇಕೆ ವಿಸ್ತರಿಸಿ ಹೇಳಲೆ ಎಂದೆನಾಕೆಗೆ. ಅರಳು ಹುರಿದಂತೆ ನಾನು ಇಂಗ್ಲಿಷು ಮಾತನಾಡಲು ಹುಡುಗರ ಹೊಟ್ಟೆ ಉರಿವುದು ಅಚ್ಚರಿಯ ಮೆಚ್ಚುಗೆಯ ಹುಡುಗಿಯರ ಕುಡಿನೋಟ ನನ್ನತ್ತ ಹರಿದು ಬರುವುದು ಪ್ರೊಫೆಸರ್ಸ ನನ್ನ ಜೊತೆಗೆ ನಗುನಗುತ ಮಾತಾಡಲು ಹೆಮ್ಮೆಯಿಂದ ಎದೆಯುಬ್ಬುವುದು ಮನೆಸೇರಲು ಅಮ್ಮನ ಕನ್ನಡದ ಸಿಹಿ ನುಡಿಯು ಮನಕೇನೋ ತಂಪನೆರೆವುದು ಉದ್ಯೋಗ ಕೈಗೆಟಕಲು ವಿದೇಶಕೂ ಛಾಪು ಹಾಕಲು ಇಂಗ್ಲಿಷಿನ ಚಮಕ್ಕು ಬೇಕು ಮನದಾಳದ ಭಾವವ ಹಾಡಾಗಿ ಉಕ್ಕಿಸಲು ಕನ್ನಡವೇ ಕೈಹಿಡಿಬೇಕು ಎಡವಟ್ಟು ಪ್ರಶ್ನೆ ಇಟ್ಟು ತಲೆಗೆ ಹುಳವನು ಬಿಟ್ಟು ನಗುತಿರುವೆಯಲ್ಲ ನೀನು ಇಂಗ್ಲಿಷ್ ಪಿರಿಡಿನ ಸಮಯವಾಯಿತು ನೋಡು ಬೆಲ್ಲಾಯ್ತು ನಡಿ ಇನ್ನು.              ತ್ರಿನೇತ್ರಜ (ಶಿವಕುಮಾರ ಹಿರೇಮಠ)
        * ಮಿಲನ * ಹೃದಯ ಮೈತ್ರಿಯ ಸಿಹಿ ಮಿಲನ ಸುಖ ಶೃಂಗದ ಹಿತಕರ ಮಿಥುನ ತನ್ನ ಮಡಿಲನೆ ಮಂಚವಾಗಿಸಿ ನಿಶೆ ಕೆಣಕಿಹಳು ಕರೆದೆಮ್ಮನು ಸುಪ್ತ ಚೆಲುವ ನವಿರು ತಾಗುತ ತುಂಬಿತಂತು ಮನಕೆ ಮತ್ತನ್ನು ದೀಪವಾರೊ ಮುನ್ನ ನಯನ ಮಧುರ ನುಡಿಗಳನಾಡಿಹವು ಬೆಳಕ ಮುಚ್ಚುತ ಅಧರಗಳು ಮಧುವರಸಿ ಹೊಸೆದಾಡಿಹವು ಧುತ್ತನೆರಗೆ ರತಿಪತಿ ಜೋಡಿ ಅಂತರಂಗದಿ ಶೃಂಗಾರ ಲೀಲೆ ಶರಣಾಗಿಸಲೆ ಮೊದಲಿಟ್ಟಿರಲು ಓಡಿಹುದು ನಾಚಿಕೆ,ಇಲ್ಲದೆ ನೆಲೆ. ತನುವ ತಾಳ ಆವೇಗಕೆ ಸಿಲುಕಿ ನಲಿದುಲಿಯಿತು ಉಸಿರಾಟ ಗೆಲುವಿಗಾಗಿ ಕಾದು ಕಾಯ್ದು ಸೋಲಿಗೆ ಶರಣಾಯಿತು ಕೂಟ    ತ್ರಿನೇತ್ರಜ. ( ಶಿವಕುಮಾರ ಹಿರೇಮಠ)
*ಇವನಾರೆ ಸಖೀ* ಇವನಾರೆ ಸಖೀ ಹೇಳಿವನಾರೇ|| ನೀಲಾಂಬರ ಕಾಯ ಸೆಟೆದೆದೆ ನಿರ್ಭಯ ಕ್ಷಾತ್ರತೇಜೋಮಯ ಮೊಹನಾಂಗನಿವನಾರೆ ||ಪ|| ಮುನಿಜನರೊಡಗೂಡಿ ಮಿಥಿಲಾ ಸಭೆಯೊಳಗೆ ಅನುಜನೊಡನೆ ಬಂದಿಹ ಧನುರ್ಧರನಿವನಾರೆ ||೧|| ಶಿವ ಧನಸ್ಸನ್ನೆ ಎತ್ತಿ ಬಲದಿಂ ಬಾಗಿಸುತ ಹುರಿಗೊಳಿಸಲೆತ್ನಿಸಿ ತುಂಡರಿಸಿದಿವನಾರೆ ||೨|| ವೀರ ಪರಶುರಾಮಂಗೆ ಪ್ರತಿಯಾಗಿ ನಿಂದಿಹ ಜನಕ ಕುವರಿಯ ವರ ರಾಜಕುವರನಿವನಾರೆ ||೩|| ದಶರಥ ವಂಶಕೇಸರಿ ರಕ್ಕಸ ಕುಲ ಸಂಹಾರಿ ಶ್ರೀಹರಿಯ ಅವತಾರಿ ಶ್ರೀರಾಮನಿಹನೇನೇ. ||೪|| ತ್ರಿನೇತ್ರಜ